ಯಾರು ಬಂದರೆ ತಾನೆ ಏನು ?

ನಿನಗೆ ಅರವತ್ತಾಯಿತಾ ಎಂದದ್ದು
‘ಬರೋ ಹೊತ್ತಾಯಿತಾ’ ಎಂದು ಕೇಳಿಸಿ
ಸಣ್ಣಗೆ ಬೆಚ್ಚಿದೆ ಒಳಗೆ,
ಯಾರು ಕೇಳಿದ್ದು ಹಾಗೆ ?
ಜೊತೆಗಿದ್ದ ಅಳಿಯನ ? ಮಗನ ? ಅಥವಾ
ಸಿನಿಮಾ ರೇಸು ಕಾರು ಬಾರು ಎಂದು
ಸದಾ ಜೊತೆಗೆ ಪೋಲಿ ಅಲೆಯುವ
ಅವನ ಗೆಳೆಯನ ?
ಏನು ಕೇಳಿದರೊ ?
ಈ ಬೆಚ್ಚನೆ ಆರೋಗ್ಯ ಕಂಡು
ಮೆಚ್ಚಿಗೆ ಹುಟ್ಟಿ ಕೇಳಿದರೊ ?
ಯಾರಿಗೆ ಗೊತ್ತು
ಹುಚ್ಚು ಜನ ಅಸೂಯೆಪಟ್ಟೇ ಆಡಿದರೊ ?

ಯಾರು ಬಂದಾರೆಂದು ಇದ್ದೀತು ?
ಯಾರು ಬಂದರು ತಾನೆ ಏನು ದಿಗಿಲು ?
ಬಂದವರು ತಂದ ಋಣದಲ್ಲಿ ತೂಗಾಡುತಿವೆ
ನೂರು ಉರುಳಿನ ನೆರಳು ;
ಕನಸು ಕಲಿಸಿದ ಅಮ್ಮ
ಕಂಡು ತೀರಿದ ಅಪ್ಪ
ಕೈ ಹಿಡಿದ ಕಣ್ಮಣಿಯೊ
ತನ್ನ ಲೆಕ್ಕಗಳಲ್ಲಿ ನನ್ನ ಎತ್ತರ ಅಳೆದು
ನಟ್ಟನಡು ಚೌಕದಲಿ ಹರಾಜು ಹಾಕಿದ ಮಾಯೆ
ನುಂಗಲಾಗದೆ ಸುಟ್ಟ ಬಿಸಿ ಬಿಸೀ ತುಪ್ಪ
ಮಿಠಾಯಿ ಮಕ್ಕಳು, ಜೊತೆಗೆ ಕಠಾರಿ ನಂಟರು
ವೃತ್ತಿ ಹವ್ಯಾಸ ನೆರೆಹೊರೆಗೆ ಹುಟ್ಟಿದ ಎಷ್ಟೋ
ಪಟಾಕಿ ಗೆಳೆಯರು,

ಬೆಳಗಿನ ತುಷಾರ ಸರಿದು
ಕೆರಳಿದ ಮಧ್ಯಾಹ್ನ ಬೆಳೆದು
ಕನಸಿದ್ದ ಮುಖದಲ್ಲಿ ಸತ್ಯದ
ಕಠೋರ ದಾಡೆಗಳು !

ತುಂಬುತಿಂಗಳ ಬದುಕು
ಬರಿ ತಂಗಳು ಈಗ.
ನಿನ್ನೆ ಮೊನ್ನೆಯ, ಇವತ್ತು ನಿನ್ನೆಯ
ನಾಳೆ ಇಂದಿನ ಕಾರ್ಬನ್ ಕಾಪಿ.
ತರ್ಕಕ್ಕೆ ಗಣಿತಕ್ಕೆ ಅಂಕೆಗಳ ಮಣಿತಕ್ಕೆ ಸಿಕ್ಕು
ಬದುಕಲ್ಲಿ ಸುಖ ಸಿಗದ ಪಾಪಿ.
ಇದೆಲ್ಲ ಮೀಟಿ
ತಾರೆಗಳನ್ನೇ ದಾಟಿ
ನಿಂತ ಅನಂತದ ಹನಿ ಹನಿ ಆಮಂತ್ರಣ.
ಕಳ್ಳ ಹೆಜ್ಜೆಯನಿಟ್ಟು ಬಂದ ಕಾಮದ ಬೆಕ್ಕು
ಕತ್ತಲಲ್ಲಿ ತಿಂದು ಬಿಕ್ಕಿದ ಬದುಕಿನ
ಮೂಳೆಯವಶೇಷಕ್ಕೆ
ಅನಿರೀಕ್ಷಿತ ಅದ್ಭುತದ ಸಿಂಚನ.

ಹೀಗಿರುತ್ತ
ಯಾರು ಬಂದರೆ ತಾನೆ ಏನಂತೆ ?
ಬಾ ಎಂದು ಕರೆದರೂ ಇಲ್ಲ ಚಿಂತೆ.
ಬಂದು ಮುಟ್ಟಲಿ ನನ್ನ,
ಮುಟ್ಟಿ ಬಿಡಿಸಲಿ ಸಣ್ಣ
ಪಂಜರದಿ ಸೆರೆಸಿಕ್ಕ
ಗುಟ್ಟುಗಳ ಸಂತೆ.
ಹಕ್ಕಿ ಹಾರಲಿಬಿಡಿ ಬಾನಿನಲ್ಲಿ
ಸುಖವುಕ್ಕಿ ಈಜಲಿ ಬೆಳಕುಗಡಲಿನಲ್ಲಿ
ದೂರ ಮಣಿಯಾಗುತ್ತ ಸಮೆದು ಕಣವಾಗುತ್ತ
ತಾನೆ ಬಾನಾಗುತ್ತ ಕಾಣದಲ್ಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಳಿಗೆಬಟ್ಟಲ ತಿರುವುಗಳಲ್ಲಿ – ೨೯
Next post ತುಳುನಾಡಿನ ಸಾಹಿತ್ಯ ಸಿರಿ

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

cheap jordans|wholesale air max|wholesale jordans|wholesale jewelry|wholesale jerseys